Koppala: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Elections 2023) ಯ ಬಿಜೆಪಿಯ ಮೊದಲ ಪಟ್ಟಿ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಆದರೆ, ಬಿಡುಗಡೆಗೂ ಮುನ್ನ ಬಿಜೆಪಿಯಲ್ಲಿ ಹಲವಾರು ವಿದ್ಯಾಮಾನಗಳು ನಡೆದವು. ಇದಕ್ಕೆ ಕೆಆರ್ ಪಿಪಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy)ಪ್ರತಿಕ್ರಿಯೆ ನೀಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಹಿರಿಯ ನಾಯಕರಾದ ಕೆಎಸ್ ಈಶ್ವರಪ್ಪ (KS Eshwarappa), ಲಕ್ಷ್ಮಣ ಸವದಿಗೆ (Laxman Savadi) ಹೈಕಮಾಂಡ್ ಟಿಕೆಟ್ ನೀಡಿಲ್ಲ. ಅಲ್ಲದೇ, ಜಗದೀಶ್ ಶೆಟ್ಟರ್ (Jagadish Shettar) ಅವರಿಗೆ ಟಿಕೆಟ್ ತಪ್ಪುವ ಸಾಧ್ಯತೆ ಇದೆ. ಇಂತಹ ಹಿರಿಯ ನಾಯಕರಿಗೆ ಈ ರೀತಿ ಅವಮಾನ ಮಾಡಿರುವುದು ಸರಿಯಲ್ಲ. ಇದು ಬಿಜೆಪಿಯಿಂದ ನಡೆಯಬಾರದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಮಾತನಾಡಿದ ಜನಾರ್ದನ ರೆಡ್ಡ, ಹಿಂದೆ ಯಾವ ಗುಂಪು ನನ್ನನ್ನ ಬಿಜೆಪಿ ಪಕ್ಷಕ್ಕೆ ಕರೆದುಕೊಳ್ಳಬಾರದು ಎಂದು ತಡೆದಿತ್ತೋ, ಇಂದು ಅದೇ ಗುಂಪು ಯಡಿಯೂರಪ್ಪ ಅವರಿಗೆ ಫುಲ್ ಸ್ಟಾಪ್ ಇಟ್ಟಿದೆ. ಅವರು ವಿಧಾನಸೌಧದಲ್ಲಿ ಕಣ್ಣೀರುಡುವಂತೆ ಮಾಡಿದೆ. ಈಶ್ವರಪ್ಪ, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಪಕ್ಷಕ್ಕಾಗಿ 30 ವರ್ಷ ಶ್ರಮವಹಿಸಿದ್ದಾರೆ. ಅವರಿಗೆ ಟಿಕೆಟ್ ಇಲ್ಲ ಅಂತ ಹೇಳುವುದು ಸರಿಯಲ್ಲ ಎಂದು ಹೇಳಿದ್ದಾರೆ.

75ನೇ ವಯಸ್ಸಿನಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಇತಿಹಾಸ ಸೃಷ್ಟಿ ಮಾಡಿದ್ದಾರೆ. ಜಗದೀಶ್ ಶೆಟ್ಟರ್ ಅವರಿಗೆ ರಾಜಕೀಯ ಮಾಡದೇ ಇರುವಂತ ಪರಸ್ಥಿತಿ ಬಂದಿಲ್ಲ. ಜನಾರ್ದನ ರೆಡ್ಡಿಯನ್ನ ಕಡೆಗಣೆಸಿದ್ದು ಅದು ಬೇರೆ. ಆದರೆ ಯಡಿಯೂರಪ್ಪ, ಶೆಟ್ಟರ್, ಈಶ್ವರಪ್ಪ ಅಂತವರನ್ನ ಕಡೆಗಣಿಸಿದ್ದು ಸರಿಯಲ್ಲ. ಇವರೆಲ್ಲರೂ ಪಕ್ಷಕ್ಕಾಗಿ ದುಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಟಿಕೆಟ್ ತಪ್ಪಿದ ಹಿನ್ನೆಲೆ ಗೂಳಿಹಟ್ಟಿ ಶೇಖರ್ ಅವರು ಇಂದು ಜನಾರ್ದನ ರೆಡ್ಡಿ ಅವರನ್ನು ಭೇಟಿಯಾಗಿದ್ದಾರೆ. ಇವತ್ತು ನಾಳೆಯೊಳಗೆ ಒಂದು ತೀರ್ಮಾನ ತೆಗೆದುಕೊಳ್ಳುತ್ತೇನೆ. ಅಥಣಿಯಲ್ಲಿ ಈಗಾಗಲೇ ಕ್ಯಾಂಡಿಡೇಟ್ ಹಾಕಿದ್ದೇನೆ. ಅಲ್ಲಿ ಪ್ರಶ್ನೆಯೇ ಬರುವುದಿಲ್ಲ ಎಂದರು.
ಯಾರ ಸಂತೋಷಕ್ಕಾಗಿ ಬಿಜೆಪಿ ಈ ರೀತಿ ಮಾಡುತ್ತಿದೆ ಎನ್ನೋ ಪ್ರಶ್ನೆಗೆ ನಗುತ್ತಲೇ ನಿಮ್ಮ ಪ್ರಶ್ನೆಯಲ್ಲೆ ಉತ್ತರವಿದೆ ಎಂದು ಬಿ.ಎಲ್. ಸಂತೋಷ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.