ಮೈಸೂರು : ವರುಣಾ ಕ್ಷೇತ್ರದಿಂದ (Varuna Constituency) ಸ್ಪರ್ಧಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಇದಕ್ಕೂ ಮುನ್ನ ಹುಟ್ಟೂರು ಸಿದ್ದರಾಮನಹುಂಡಿಗೆ ತೆರಳಿದ್ದ ಸಿದ್ದರಾಮಯ್ಯ ಅವರು ಮನೆ ದೇವರು ಸಿದ್ದರಾಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿ ಹಾಗೂ ಉತ್ತನಹಳ್ಳಿಯ ಜ್ವಾಲಾಮುಖಿ ತ್ರಿಪುರಸುಂದರಿ ದೇವಿಗೂ ಭಕ್ತಿಭಾವದಿಂದ ಪೂಜೆ ಸಲ್ಲಿಸಿದ್ದಾರೆ.

ನಂಜಗೂಡಿನಲ್ಲಿ (Nanjangud) ನಡೆದ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ ಸಮಾವೇಶದಲ್ಲಿ ಮಾತನಾಡಿದ ಅವರು, ಇದು ನನ್ನ ಕೊನೆಯ ಚುನಾವಣೆ. ಹೀಗಾಗಿ ನನ್ನನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಮುಂದಿನ ಚುನಾವಣೆಯಿಂದ ಯತೀಂದ್ರ, ಧವನ್ ರಾಕೇಶ್ ಇದ್ದಾರೆ. ಧವನ್ ರಾಜಕೀಯಕ್ಕೆ ಬರಲು ಇನ್ನೂ 8 ವರ್ಷ ಬೇಕು. ಓದು ಮುಗಿಸಿದ ನಂತರ ರಾಜಕಾರಣಕ್ಕೆ ಬರುತ್ತಾನೆ. ರಾಕೇಶ್ ಮೇಲೆ ಇದ್ದ ಪ್ರೀತಿಯನ್ನು ಅವನ ಮಗನ ಮೇಲೂ ತೋರಿಸುತ್ತಿದ್ದೀರಿ ಅದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಬಿಜೆಪಿಯಲ್ಲಿ ಹಿರಿಯರಿಗೆ ಗೌರವವಿಲ್ಲ, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಗೆ ಟಿಕೆಟ್ ಕೊಡಲಿಲ್ಲ. ಇಡೀ ರಾಜ್ಯದಲ್ಲಿ ಈಗ ಕಾಂಗ್ರೆಸ್ ಪರ ಗಾಳಿ ಬೀಸಿದೆ. ವರುಣಾ ಜನತೆಗೆ ಎಷ್ಟೇ ಕೋಟಿ ಕೊಟ್ಟರೂ ಅದನ್ನ ಕಾಲಕಸದಂತೆ ಕಾಣುತ್ತಾರೆ ಎನ್ನುವುದು ನನಗೆ ಗೊತ್ತು. ಈ ಬಾರಿ ನಾನು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಹೇಳಿದ್ದಾರೆ.