Bangalor : ಇಂದು ರಾಜ್ಯಲ್ಲಿನ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ (Vote) ನಡೆಯುತ್ತಿದೆ. ಮತದಾರರು ಉತ್ಸಾಹದಿಂದ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸುತ್ತಿದ್ದಾರೆ. ಆದರೆ, ಈ ಸದರ್ಭದಲ್ಲಿ ಇಬ್ಬರು ಸಾವನ್ನಪ್ಪಿರುವ ಪ್ರತ್ಯೇಕ ಪ್ರಕರಣಗಳು ಬೆಳಕಿಗೆ ಬಂದಿದೆ.
ಮತದಾನ ಮಾಡಲು ಕೇಂದ್ರಕ್ಕೆ ಬಂದಿದ್ದ ಇಬ್ಬರು ಸಾವನ್ನಪ್ಪಿರುವ ಪ್ರತ್ಯೇಕ ಘಟನೆ ಹಾಸನ (Hassan) ಮತ್ತು ಬೆಳಗಾವಿಯಲ್ಲಿ (Belagavi) ನಡೆದಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ಮತ ಚಲಾಯಿಸಲು ಬಂದಿದ್ದ ಜಯಣ್ಣ (49) ಹಕ್ಕು ಚಲಾಯಿಸಿದ ನಂತರ ಕೊಠಡಿಯಿಂದ ಹೊರ ಬಂದಾಗ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾರೆ. ಮತದಾನ ಕೇಂದ್ರದ ಆವರಣದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ.
ಬೆಳಗಾವಿಯಲ್ಲಿ ಮತಚಲಾಯಿಸಲು ಆಗಮಿಸಿದ್ದ ಮಹಿಳೆ ಕುಸಿದು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೆಳಗಾವಿಯ ಸವದತ್ತಿ (Savadatti) ತಾಲೂಕಿನ ಯರಝರ್ವಿ ಮತಗಟ್ಟೆಯಲಿ ಗ್ರಾಮದ ಪಾರವ್ವ ಈಶ್ವರ್ ಸಿದ್ನಾಳ (68) ಮತಗಟ್ಟೆಗೆ ಆಗಮಿಸಿದ್ದರು. ಆದರೆ, ಆವರಣದಲ್ಲಿಯೇ ಕುಸಿದು ಬಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.