ಅಂಬುಲೆನ್ಸ್ಗೆ (Ambulance) ಬಾಡಿಗೆ ನೀಡಲು ಹಣ (Money) ಇಲ್ಲದ ಕಾರಣ ತಂದೆಯೊಬ್ಬ 5 ತಿಂಗಳ ಮಗುವಿನ ಶವವನ್ನು ಬ್ಯಾಗ್ ನಲ್ಲಿಟ್ಟುಕೊಂಡುಂ ಬಸ್ ನಲ್ಲಿ ಸಂಚರಿಸಿದ ಮನಕಲಕುವ ಘಟನೆ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ.
ಅಲ್ಲಿಯ ಸಿಲಿಗುರಿಯಲ್ಲಿ ಈ ಘಟನೆ ನಡೆದಿದೆ. ಸಿಲಿಗುರಿಯ ಆಸ್ಪತ್ರೆಯೊಂದರಲ್ಲಿ ಆಶಿಮ್ ದೇಬ್ಶರ್ಮಾ ಎಂಬ ವ್ಯಕ್ತಿ ತನ್ನ 5 ತಿಂಗಳ ಮಗುವನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು 6 ದಿನದಿಂದ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದ್ದು, ಈ ಸಂದರ್ಭದಲ್ಲಿ ಚಿಕಿತ್ಸೆಗಾಗಿ 16 ಸಾವಿರ ರೂ. ಖರ್ಚಾಗಿತ್ತು.
ಸಿಲಿಗುರಿಯಿಂದ 200 ಕಿ.ಮೀ ದೂರದಲ್ಲಿರುವ ಕಲಿಯಗಂಜ್ ಎಂಬಲ್ಲಿ ಆಶಿಮ್ ದೇಬ್ಶರ್ಮಾ ವಾಸಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಮಗುವಿನ ಶವವನ್ನು ತನ್ನೂರಿಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದ. ಆದರೆ ಅಂಬುಲೆನ್ಸ್ನ ಡ್ರೈವರ್ 8 ಸಾವಿರ ಕೇಳಿದ್ದಕ್ಕೆ ಹಣ ನೀಡಲು ಕಷ್ಟವಾಗಿ 5 ತಿಂಗಳ ಮಗುವಿನ ಶವವನ್ನು ಬ್ಯಾಗ್ನಲ್ಲಿ ಕಟ್ಟಿಕೊಂಡು 200 ಕಿಮೀವರೆಗೆ ಬಸ್ನಲ್ಲಿ ಪ್ರಯಾಣಿಸಿದ್ದಾನೆ. ಘಟನೆಗೆ ಸಂಬಂಧಿಸಿ ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿಜೆಪಿಯ (BJP) ಸುವೇಂದು ಅಧಿಕಾರಿ (Suvendu Adhikari) ತೀವ್ರ ಬೇಸರ ವ್ಯಕ್ತಪಡಿಸಿ, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.