ಸಿದ್ದರಾಮಯ್ಯ ಅವರು ರಾಜ್ಯದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 2ನೇ ಬಾರಿಗೆ ಅವರು ರಾಜ್ಯದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಬಡತನದಲ್ಲಿಯೇ ಹುಟ್ಟಿದ ಈ ಕುರಿಗಾಹಿ, ಇಂತಹ ದೊಡ್ಡ ಸಾಧನೆ ಮಾಡಿರುವುದು ನಿಜಕ್ಕೂ ಅದ್ಭುತವೇ ಸರಿ.

ತಳಸಮುದಾಯದ ವ್ಯಕ್ತಿಯೊಬ್ಬ ರಾಜಕೀಯದಲ್ಲಿ ಬೆಳೆದು ಉತ್ತಮ ಸ್ಥಾನಗಳನ್ನು ಅಲಂಕರಿಸಿ ಎದೆಯುಬ್ಬಿಸಿ ನಡೆಯುತ್ತಿದ್ದದ್ದು, ಅನೇಕರ ಕಣ್ಣು ಕೆಂಪಾಗಿಸಿತ್ತು. 1994ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಸಿದ್ದರಾಮಯ್ಯ ಅವರು ಹೆಚ್.ಡಿ.ದೇವೇಗೌಡರ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದರು. ಆಗ ಅವರಿಗೆ ಬಯಸದೆ ಹಣಕಾಸು ಖಾತೆ ಸಿಕ್ಕಿತ್ತು. “ಸಿದ್ದರಾಮಯ್ಯಗೆ ಕುರಿ ಲೆಕ್ಕ ಹಾಕಲು ಬರುವುದಿಲ್ಲ. ಈತ ಹೇಗೆ ಹಣಕಾಸು ಸಚಿವನಾಗುತ್ತಾನೆ” ಎಂದು ಆ ಸಂದರ್ಭದಲ್ಲಿ ಹಲವರು ಕುಹಕವಾಡಿದ್ದರು.

ಹಣಕಾಸು ಸಚಿವರಾಗಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಬಗ್ಗೆ ಆಗ ಭರಪೂರ ಪ್ರಶಂಸೆ ವ್ಯಕ್ತವಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಸಿದ್ದರಾಮಯ್ಯ ಬರೋಬ್ಬರಿ 13 ಬಜೆಟ್ಗಳನ್ನು ಮಂಡಿಸಿದ್ದು, ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿ ಏಳು ಬಜೆಟ್ಗಳನ್ನು ಮಂಡಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಾಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರು. ಆಗ ಹಣಕಾಸು ಖಾತೆಯನ್ನೂ ಹೊಂದಿದ್ದ ಸಿದ್ದರಾಮಯ್ಯ ಬರೋಬ್ಬರಿ 6 ಬಜೆಟ್ ಮಂಡಿಸಿಸಿದ್ದರು. ಸದ್ಯ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಲ್ಲದೇ, ತಮ್ಮ ದಾಖಲೆಯ 14ನೇ ಬಜೆಟ್ ಕೂಡ ಅವರೇ ಮಂಡಿಸಲಿದ್ದಾರೆ.