Shrinagar: ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಬಿಗಿ ಭದ್ರತೆಯ ನಡುವೆ ಇಂದಿನಿಂದ ಜಿ 20 ದೇಶಗಳ ಮೂರನೇ ಪ್ರವಾಸೋದ್ಯಮ ಕಾರ್ಯ ಗುಂಪು ಸಭೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂತೆಗೆದುಕೊಂಡ ನಂತರ ಮತ್ತು ಆಗಸ್ಟ್ 2019 ರಲ್ಲಿ ರಾಜ್ಯತ್ವವನ್ನು ತೆಗೆದುಹಾಕಿದ ನಂತರ ಈ ಪ್ರದೇಶದಲ್ಲಿ ನಡೆವ ಮೊದಲ ಅಂತಾರಾಷ್ಟ್ರೀಯ ಸಭೆ ಇದಾಗಿದೆ.
ಜಿ.20 ಸಭೆ ಹಿನ್ನೆಲೆಯಲ್ಲಿ ಇಡೀ ಕಣಿವೆ ನಾಡಿನಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಎಲ್ಲೆಡೆಯೂ ಭದ್ರತಾ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದಾರೆ. ಜಿ20 ಮುಖ್ಯ ಸಂಯೋಜಕ ಹರ್ಷ್ ವರ್ಧನ್ ಶೃಂಗ್ಲಾ ಮಾತನಾಡಿ, ಭಾರತವು ತನ್ನ ಜಿ20 ಅಧ್ಯಕ್ಷ ಸ್ಥಾನದ ಅರ್ಧದಾರಿಯಲ್ಲಿ ಇದೆ. ಇಲ್ಲಿಯವರೆಗೆ ದೇಶಾದ್ಯಂತ 118 ಸಭೆಗಳನ್ನು ನಡೆಸಲಾಗಿದೆ. ಪ್ರವಾಸೋದ್ಯಮದ ಹಿಂದಿನ ಎರಡು ಸಭೆಗಳಿಗೆ ಹೋಲಿಸಿದರೆ ಶ್ರೀನಗರ ಸಭೆಯು ಅತಿ ಹೆಚ್ಚು ಭಾಗವಹಿಸುವವರನ್ನು ಸ್ವೀಕರಿಸಿದೆ ಎಂದು ಹೇಳಿದ್ದಾರೆ.
ಜಿ20 ಸದಸ್ಯ ರಾಷ್ಟ್ರಗಳಿಂದ ಸುಮಾರು 60 ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಶ್ರೀನಗರ ಕಾರ್ಯಕ್ರಮಕ್ಕೆ ಅತಿ ಹೆಚ್ಚು ಪ್ರತಿನಿಧಿಗಳು ಸಿಂಗಾಪುರದಿಂದ ಬರುತ್ತಿದ್ದಾರೆ ಎಂದು ತಿಳಿಸಿದರು. ಕಾಶ್ಮೀರದಲ್ಲಿ ಜಿ 20 ಸಭೆ ನಡೆಸುವುದನ್ನು ಚೀನಾ ವಿರೋಧಿಸಿದೆ. ಸೌದಿ ಅರೇಬಿಯಾ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡಿಲ್ಲ. ಟರ್ಕಿ ಶ್ರೀನಗರ ಸಭೆಯಿಂದ ದೂರ ಉಳಿಯಲಿದೆ. ಭಯೋತ್ಪಾದಕರು ಜಿ20 ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಬಹುದು ಎಂಬ ವರದಿಗಳ ಮಧ್ಯೆ ಸೇನೆ, ಗಡಿ ಭದ್ರತಾ ಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಸಶಸ್ತ್ರ ಸೀಮಾ ಬಾಲ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ನ ಸಾವಿರಾರು ಸೈನಿಕರು ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದಾರೆ.