ಬೆಂಗಳೂರು: ಚುನಾವಣೆಗೂ ಮುನ್ನ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಸದ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಬೇಕಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅವುಗಳಿಗೆ ತಗಲುವು ಲೆಕ್ಕಾಚಾರದ ಕುರಿತು ಅಂಕಿ-ಅಂಶ, ತಗಲುವ ಖರ್ಚಿನ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramiah) ಅವರು ಮೇ.29ರಂದು ಆಹಾರ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಪ್ರಮುಖವಾಗಿ 200 ಯೂನಿಟ್ ಉಚಿತ ವಿದ್ಯುತ್ (Free Electricity) ಜಾರಿ ಕುರಿತು ಅಧಿಕಾರಿಗಳಿಂದ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದಿದ್ದಾರೆ.
ಉಚಿತ ವಿದ್ಯುತ್ ಯೋಜನೆಯಿಂದ 2.14 ಕೋಟಿ ಕುಟುಂಬಗಳಿಗೆ ಅನುಕೂಲವಾಗಿದೆ. ವಾರ್ಷಿಕ ಬಳಕೆಗೆ ಅಂದಾಜು 13,575 ಮಿಲಿಯನ್ ಯೂನಿಟ್ ಬೇಕು. ಈ ಯೋಜನೆಗೆ ಇಂಧನ ಶುಲ್ಕ ಅಂದಾಜು 8,008 ಕೋಟಿ ರೂ. ತಗಲುತ್ತದೆ. ಯೋಜನೆಗೆ ಒಟ್ಟು 12,038 ಕೋಟಿ ರೂಪಾಯಿ ಅಗತ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.
200 ಯೂನಿಟ್ ಉಚಿತ ವಿದ್ಯುತ್ ಬಗ್ಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಮಾಜಿ ಸದಸ್ಯ ಪ್ರಭಾಕರ್ ಮಾತನಾಡಿ, ರಾಜ್ಯದಲ್ಲಿ ಗೃಹ ಬಳಕೆಗೆ ವಿದ್ಯುತ್ ಉಪಯೋಗ ಮಾಡುವವರು 1.97 ಲಕ್ಷ ಜನ ಇದ್ದಾರೆ. 200 ಯೂನಿಟ್ ಕೊಟ್ಟರೇ ತಿಂಗಳಿಗೆ 3800 ಮಿಲಿಯನ್ ಯೂನಿಟ್ ಬೇಕು. 3,509 ಕೋಟಿ ರೂ. ಒಂದು ತಿಂಗಳಿಗೆ ಬೇಕು. ವರ್ಷಕ್ಕೆ 40, 400 ಕೋಟಿ ರೂ. ಎಂದು ಹೇಳಿದ್ದಾರೆ.
50ರಷ್ಟು ಜನರು 100 ಯೂನಿಟ್ ಕಡಿಮೆ ಬಳಸುವವರಿದ್ದಾರೆ. ಕೃಷಿ ಇಲಾಖೆಯ ಪಂಪ್ ಸೆಟ್ ಗೆ ವರ್ಷಕ್ಕೆ 14 ಸಾವಿರ ಕೋಟಿ ಬೇಕು. ಉಚಿತ ಹಿನ್ನೆಲೆಯಲ್ಲಿ ವಿದ್ಯುತ್ ಬಳಕೆದಾರರು ಇನ್ನಷ್ಟು ಹೆಚ್ಚಿನ ಬಳಕೆ ಮಾಡಲಿದ್ದಾರೆ. ಗ್ಯಾಸ್ ಬದಲಾಗಿ ವಿದ್ಯುತ್ ಚಾಲಿತ ಒಲೆಗಳು ಹೆಚ್ಚಾಗಿ ಬಳಸಲಿದ್ದಾರೆ. ಇದರಿಂದ ಸರ್ಕಾರದ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ. ಒಟ್ಟಾರೆಯಾಗಿ 5 ಗ್ಯಾರಂಟಿಗಳಿಗೆ ಕಡಿಮೆ ಎಂದರೂ 50 ಸಾವಿರ ಕೋಟಿ ರೂ. ಬೇಕು. 5 ವರ್ಷಕ್ಕೆ ಸುಮಾರು 4 ರಿಂದ 5 ಲಕ್ಷ ಕೋಟಿ ರೂ. ಅಗತ್ಯ ಇದೆ ಎಂದು ಅವರು ಹೇಳಿದ್ದಾರೆ. ಸರ್ಕಾರದ ಬಳಿ ಅಷ್ಟೊಂದು ಹಣ ಇಲ್ಲದಿರುವುದರಿಂದ ಸಾಲ ಮಾಡುವ ಸಂದಿಗ್ಧತೆ ಎದುರಾಗಿದೆ.