Chkkkodi : ನಿರೀಕ್ಷೆಯಂತೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ(Laxman Savadi) ಅವರಿಗೆ ಟಿಕೆಟ್ ಕೈ ತಪ್ಪಿದೆ. ಇದರ ಬೆನ್ನಲ್ಲಿಯೇ ಅವರು ವೇದಿಕೆಯ ಮೇಲೆಯೇ ಕಣ್ಣೀರು ಹಾಕಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಮಾತನಾಡುತ್ತಿದ್ದ ಅವರು, ನನಗೆ ಪಕ್ಷದ ಮೇಲೆ ದ್ವೇಷವಿಲ್ಲ. ಪಕ್ಷ ಒಳ್ಳೆಯದು. ರಾಷ್ಟ್ರ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಪಕ್ಷ ಬೆಳೆದು ನಿಂತಿದೆ. ಆದರೆ ರಾಜ್ಯಮಟ್ಟದಲ್ಲಿರುವ ಕೆಲ ನಾಯಕರು ಲಕ್ಷ್ಮಣ ಸವದಿ ಅವಶ್ಯಕತೆ ಇಲ್ಲ ಎಂಬ ಭಾವನೆಯನ್ನು ಬೆಳೆಸಿಕೊಂಡಿದ್ದಾರೆ. ಆದರೂ ಬಿಜೆಪಿಯ ಹಿರಿಯ ನಾಯಕರಿಗೆ ಅಭಿನಂದನೆ ತಿಳಿಸಿ, ಜನರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ನನ್ನ ತೀರ್ಮಾನವನ್ನು ನಾನು ಸದ್ಯದಲ್ಲಿಯೇ ಪ್ರಕಟಿಸುತ್ತೇನೆ. ನಮ್ಮ ಸಮಾಜ ಎಂದಿಗೂ ಕೈ ಬಿಟ್ಟಿಲ್ಲ. ರಾಜಕೀಯವಾಗಿ ಸಾಕಿ ಸಲುಹಿದ್ದಾರೆ. ಅವರಿಗೆ ನಾನೆಂದೂ ಋಣಿ ಆಗಿರುತ್ತೇನೆ ಎಂದು ಭಾವುಕರಾಗಿ ನುಡಿದಿದ್ದಾರೆ.

ಕಳೆದ ಮೂರು ದಿನಗಳಿಂದ ಬಿಜೆಪಿ (BJP) ಹೈಕಮಾಂಡ್ ಸರಣಿ ಸಭೆ ನಡೆಸಿತ್ತು. ಅಲ್ಲದೇ, ನಿನ್ನೆ ರಾತ್ರಿ ಬಿಜೆಪಿಯಿಂದ ಕರ್ನಾಟಕ ಚುನಾವಣೆಗೆ (Karnataka Election) ಗೆ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇನ್ನು ಕೇವಲ 35 ಕ್ಷೇತ್ರಗಳನ್ನು ಹೈಕಮಾಂಡ್ ಬಾಕಿ ಉಳಿಸಿಕೊಂಡಿದೆ. ಈ ಬಾರಿ ಅನೇಕ ಮುಖಂಡರ ನಡುವೆ ಟಿಕೆಟ್ಗಾಗಿ ಪೈಪೋಟಿ ನಡೆದಿತ್ತು.

ಅಥಣಿ ಕ್ಷೇತ್ರಕ್ಕೂ ಬಿಜೆಪಿ ನಾಯಕರಾದ ಲಕ್ಷ್ಮಣ ಸವದಿ ಹಾಗೂ ಮಹೇಶ್ ಕುಮಟಳ್ಳಿ ಮಧ್ಯೆ ಟಿಕೆಟ್ ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ ಕೊನೆಘಳಿಗೆಯಲ್ಲಿ ಲಕ್ಷ್ಮಣ್ ಸವದಿಗೆ ಟಿಕೆಟ್ ಕೈ ತಪ್ಪಿದ್ದು, ಮಹೇಶ್ ಕಮಟಳ್ಳಿಗೆ ಟಿಕೆಟ್ ಘೋಷಣೆಯಾಗಿದೆ.