Madikeri : ಕೊಡಗು (Kodagu) ವಿಶ್ವ ಹಿಂದೂ ಪರಿಷತ್ (Vishva Hindu Parishad) ಅಧ್ಯಕ್ಷ, ನ್ಯಾಯವಾದಿ ಪಿ.ಕೃಷ್ಣಮೂರ್ತಿ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ (Firing) ನಡೆಸಲು ಯತ್ನಿಸಿರುವ ಘಟನೆ ಬುಧವಾರ ರಾತ್ರಿ ಅಬ್ಯಾಲದಲ್ಲಿ ನಡೆದಿದೆ.

ಕೃಷ್ಣಮೂರ್ತಿಯವರು ಚೆಟ್ಟಳ್ಳಿಯಿಂದ (Chettalli) ಮಡಿಕೇರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಗುಂಡು ಕಾರಿಗೆ ತಗುಲಿದೆ. ಇದರಿಂದ ವಿಹೆಚ್ಪಿ (VHP) ಅಧ್ಯಕ್ಷ ಬಚಾವ್ ಆಗಿದ್ದಾರೆ ಎನ್ನಲಾಗಿದೆ. ಈ ಕುರಿತು ಮಡಿಕೇರಿ (Madikeri) ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್ಪಿ ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿ ಪ್ರಕ್ಷುಬ್ಧ ವಾತಾವರಮ ನಿರ್ಮಾಣವಾಗಿದೆ.

ಸಿಎಂ ಇಳಿದ ಹೆಲಿಪ್ಯಾಡ್ ಬಳಿ ಬೆಂಕಿ:
ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಇದ್ದ ಹೆಲಿಪ್ಯಾಡ್ನಲ್ಲಿ (Helipad) ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ (BJP) ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಬಸವರಾಜ ಬೊಮ್ಮಾಯಿ ಅವರು ಅರೆಶಿರೂರು ಹೆಲಿಪ್ಯಾಡ್ ಮೂಲಕ ಕೊಲ್ಲೂರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಹೆಲಿಕಾಪ್ಟರ್ ಇಳಿಯುವ ಸಂದರ್ಭದಲ್ಲಿ ಹೆಲಿಪ್ಯಾಡ್ ನ ಹತ್ತಿರ ಬೆಂಕಿ ಕಾಣಿಸಿಕೊಂಡಿದೆ. ಸಿಎಂ ಎಸ್ಕಾರ್ಟ್ ಹೋದ ನಂತರ ಬೆಂಕಿ ಕಾಣಿಸಿಕೊಂಡಿದೆ. ಸ್ಥಳದಲ್ಲಿದ್ದ ಅಗ್ನಿಶಾಮಕ ದಳದವರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆದಿಲ್ಲ.
ಹೆಲಿಕಾಪ್ಟರ್ ನಲ್ಲಿ ಮೇಲಿನಿಂದ ನೋಡಿದಾಗ ಎಲ್ಲವೂ ಬಯಲಿನಂತೆ ಕಾಣುತ್ತದೆ. ಈ ಕಾರಣಕ್ಕೆ ಲ್ಯಾಂಡಿಂಗ್ ಜಾಗದಲ್ಲಿಯೇ ಹೆಲಿಕಾಪ್ಟರ್ ಲ್ಯಾಂಡ್ ಆಗಲು ಹೊಗೆ ಬಿಡಲಾಗುತ್ತದೆ. ದಟ್ಟವಾದ ಹೊಗೆ ಬಂದ ಸ್ಥಳದಲ್ಲಿ ಹೆಲಿಪ್ಯಾಡ್ ಇದೆ ಎಂದು ತಿಳಿದು ಪೈಲಟ್ ಹೆಲಿಕಾಪ್ಟರ್ ಅನ್ನು ಲ್ಯಾಂಡ್ ಮಾಡುತ್ತಾರೆ.

ಸಿಎಂ ವಾಹನದಲ್ಲಿ ಕೊಲ್ಲೂರಿಗೆ ಬರಲಿದ್ದಾರೆ ಎಂಬ ಮಾಹಿತಿ ಜಿಲ್ಲಾಡಳಿತಕ್ಕೆ ಸಿಕ್ಕಿತ್ತು. ಆದರೆ ಕೊನೆ ಕ್ಷಣದಲ್ಲಿ ಸಿಎಂ ಹೆಲಿಕಾಪ್ಟರ್ನಲ್ಲಿ ಬಂದಿದ್ದಾರೆ. ಲ್ಯಾಂಡಿಂಗ್ ಜಾಗದ ಹತ್ತಿರ ಹುಲ್ಲುಗಳು ಬೆಳೆದಿತ್ತು. ಕೊನೆ ಕ್ಷಣದಲ್ಲಿ ನಿಗದಿಯಾದ ಕಾರಣ ಈ ಹುಲ್ಲುಗಳನ್ನು ತೆಗೆದಿರಲಿಲ್ಲ. ಪರಿಣಾಮ ಹೆಲಿಕಾಪ್ಟರ್ ರೆಕ್ಕೆಯಿಂದಾಗಿ ಗಾಳಿ ವೇಗವಾಗಿ ಬೀಸಿ, ಹೊಗೆಯೊಂದಿಗೆ ಹುಲ್ಲಿನ ಜಾಗಕ್ಕೆ ಹರಡಿದ್ದರಿಂದ ಈ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ತಮ್ಮ ಪತ್ನಿ ಚೆನ್ನಮ್ಮ ಜೊತೆ ಭೇಟಿ ನೀಡಿದ್ದರು. ದಂಪತಿ ಸಮೇತ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದರು. ನಂತರ ಗರುಡಗಂಬಕ್ಕೆ ಪೂಜೆ ಸಲ್ಲಿಸಿದರು. ಈ ವೇಳೆ ಬಿಜೆಪಿಯ ಜಿಲ್ಲಾ ಮುಖಂಡರು ಸಿಎಂ ದಂಪತಿಗೆ ಸಾಥ್ ನೀಡಿದರು.

