Bangalore : ಕಾಂಗ್ರೆಸ್ (Congress) ಪಕ್ಷವು ಚುನಾವಣೆ ಮುಗಿಯುವವರೆಗೆ ಬಿಜೆಪಿಯಿಂದ (BJP) ಹೋದವರಿಗೆ ಸನ್ಮಾನ ಮಾಡುದೆ. ಚುನಾವಣೆ ಮುಗಿದ ಮೇಲೆ ಅವರಿಗೆ ಅಪಮಾನ ಮಾಡುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಆರೋಪಿಸಿದ್ದಾರೆ.

ಪ್ಲಾನ್ ಮಾಡಿ ನನ್ನನ್ನು ಬಿಜೆಪಿಯಿಂದ ಹೊರದಬ್ಬಿದ್ದಾರೆ ಎಂಬ ಜಗದೀಶ್ ಶೆಟ್ಟರ್ (Jagadish Shettar) ಹೇಳಿಕೆಗೆ ತಿರುಗೇಟು ನೀಡಿದ ಅವರು, ಪಕ್ಷ ಬಿಟ್ಟು ಹೋದವರು ಏನಾದರೂ ಕಾರಣ ಕೊಡಲೇಬೇಕು. ಜಗದೀಶ್ ಶೆಟ್ಟರ್ ಅವರಿಗೆ ಸ್ಥಾನಮಾನಗಳನ್ನು ಕೊಡುವುದರ ಜೊತೆಗೆ ಅವರನ್ನು ಅತ್ಯಂತ ಗೌರವಯುತವಾಗಿ ಬಿಜೆಪಿ ಕಂಡಿದೆ. ಇದರಲ್ಲಿ ಎರಡನೇ ಮಾತಿಲ್ಲ. ಕಳೆದ 25 ವರ್ಷದ ಅವರ ಬೆಳವಣಿಗೆಯಲ್ಲಿ ಬಿಜೆಪಿಯೇ ಪ್ರಮುಖವಾದ ಪಾತ್ರ ವಹಿಸಿದೆ. 25 ವರ್ಷ ಅವರನ್ನು ಬೆಳೆಸಿದ ಬಿಜೆಪಿ ಈಗ ಅವರನ್ನು ಕೆಳಗಿಳಿಸುವ ಪ್ರಯತ್ನ ಮಾಡಿಲ್ಲ. ಷಡ್ಯಂತ್ರದ ಪ್ರಶ್ನೆಯೇ ಇಲ್ಲ. ಪಕ್ಷದ ವರಿಷ್ಠರಿಗೂ ಕೂಡಾ ಇದರ ಬಗ್ಗೆ ಮಾಹಿತಿಯಿದೆ ಎಂದು ಪ್ರತ್ಯುತ್ತರ ನೀಡಿದ್ದಾರೆ.

50 ವರ್ಷಗಳಿಂದ ಲಿಂಗಾಯತ ನಾಯಕರನ್ನು ತುಳಿದಿದ್ದು ಇದೇ ಕಾಂಗ್ರೆಸ್ ಪಕ್ಷ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಿಗೆ ಲಿಂಗಾಯತರ ಮೇಲೆ ಯಾಕಿಷ್ಟು ಪ್ರೀತಿ ಬಂತೋ ಗೊತ್ತಿಲ್ಲ. ಲಿಂಗಾಯತ ಸಮುದಾಯ ಜಾಗೃತ ಸಮುದಾಯವಾಗಿದ್ದು, ಇದುವರೆಗೂ ಯಾರು ಅವರನ್ನು ಬೆಂಬಲಿಸಿದ್ದಾರೆ. ಯಡಿಯೂರಪ್ಪನವರಂತಹ (B.S.Yediyurappa) ಮೇರು ನಾಯಕತ್ವ ಹೊಂದಿರುವ ನಾಯಕರು ನಮ್ಮ ಜೊತೆ ಇರುವವರೆಗೂ ಲಿಂಗಾಯತರು ನಮ್ಮ ಜೊತೆಗೆ ಇರುತ್ತಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಲ್ಲಿ ಜನತಾ ಪಾರ್ಟಿಯಲ್ಲಿದ್ದ ವೀರೇಂದ್ರ ಪಾಟೀಲ್ ಅವರನ್ನು ಕರೆದುಕೊಂಡು ರಾಜ್ಯ ಸುತ್ತಿಸಿ ಅವರ ಮುಖಾಂತರವೇ 180 ಸೀಟ್ ಗೆದ್ದುಕೊಂಡಿದ್ದರು. ಅನಾರೋಗ್ಯಕ್ಕೆ ತುತ್ತಾದಾಗ ಅವರನ್ನು ತೆಗೆದು ಹಾಕಿ ಅವಮಾನ ಮಾಡಲಾಗಿತ್ತು. ಬಂಗಾರಪ್ಪನವರನ್ನು ಉಪಯೋಗಿಸಿಕೊಂಡು ಮುಂದೆ ಅವರನ್ನು ತಿರಸ್ಕಾರ ಮಾಡಿರುವುದೂ ನಮಗೆ ಗೊತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ವಿಭಜನೆಯಾದಾಗ ಗಟ್ಟಿಯಾಗಿ ಇಂದಿರಾ ಕಾಂಗ್ರೆಸ್ ಅವರೊಂದಿಗೆ ನಿಂತ ದೇವರಾಜ್ ಅರಸ್ ಕೂಡ ಯೂಸ್ ಆಂಡ್ ಥ್ರೋ (Use And Throw) ಆದರು. ಜಗದೀಶ್ ಶೆಟ್ಟರ್ ಅವರ ಕಾಂಗ್ರೆಸ್ ಸೇರ್ಪಡೆಯಿಂದಾಗಿ ನಮ್ಮ ಪಕ್ಷದಲ್ಲಿ ಹೊಸ ನಾಯಕತ್ವಕ್ಕೆ ಅವಕಾಶ ಸಿಗುತ್ತಿದೆ. ಖಂಡಿತವಾಗಿಯೂ ಸಂಪೂರ್ಣ ಬಹುಮತದೊಂದಿಗೆ ಹೊಸ ನಾಯಕತ್ವ ಆಡಳಿತಕ್ಕೆ ಬರಲಿದೆ. ಎಲ್ಲಾ ಸಮುದಾಯಗಳು ಕೂಡಾ ನಮ್ಮ ಬೆಂಬಲಕ್ಕೆ ನಿಲ್ಲುತ್ತವೆ ಎಂದು ಹೇಳಿದ್ದಾರೆ.